ರಾಜೇಶ್ವರಿ ಗಾಯಕ್ವಾಡ್ (ಜನನ 1 ಜೂನ್ 1991) ಭಾರತೀಯ ಕ್ರಿಕೆಟ್ ಆಟಗಾರ್ತಿ.ಅವರು ಅಂತರರಾಷ್ಟ್ರೀಯ ಕ್ರಿಕೆಟ್ಗೆ 19 ಜನವರಿ 2014 ರಂದು ಶ್ರೀಲಂಕಾ ವಿರುದ್ಧದ ಏಕ ದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾದಾರ್ಪಣೆ ಮಾಡಿದರು.ಅವರು ಬಲಗೈ ಬ್ಯಾಟ್ಸ್‌ವುಮನ್ ಮತ್ತು ನಿಧಾನ ಎಡಗೈ ಸಾಂಪ್ರದಾಯಿಕ ಬೌಲ್ಸ್ ಮಾಡುತ್ತಾರೆ.ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಒಂದು ಟೆಸ್ಟ್ ಪಂದ್ಯದಲ್ಲಿ ಆಡಿದ್ದಾರೆ. == ಜನನ ಮತ್ತು ವಿದ್ಯಾಭ್ಯಾಸ == ವಿಜಯಪುರದಲ್ಲಿ ಜೂನ್ 1, 1991ರಲ್ಲಿ ಶಿವಾನಂದ ಗಾಯಕ್ವಾಡ್ ಹಾಗೂ ಸವಿತಾ ಗಾಯಕ್ವಾಡ್ ದಂಪತಿಗೆ ಜನಿಸಿದ ರಾಜೇಶ್ವರಿ, ಶಿಕ್ಷಣವನ್ನು ವಿಜಯಪುರದಲ್ಲೇ ಮುಂದುವರಿಸಿದ್ದಾರೆ. ಬಿಡಿಇ ಸಂಸ್ಥೆಯಲ್ಲಿ ಎಸ್ಸೆಸ್ಸೆಲ್ಸಿ ಪೂರೈಸಿ, ಸರ್ಕಾರಿ ಪಿಯು ಕಾಲೇಜ್​ನಲ್ಲಿ ಪಿಯುಸಿ ಮುಗಿಸಿದ್ದಾರೆ. ನಂತರ ಬಿಎಲ್‌ಡಿಈ ಸಂಸ್ಥೆಯ ಕಾಲೇಜ್​ನಲ್ಲಿ ಬಿಎ ಪದವಿ ವ್ಯಾಸಂಗ ಮಾಡಿದ್ದಾರೆ. ತಂದೆಯನ್ನು ಕಳೆದುಕೊಂಡ ನಂತರ ಕುಟುಂಬದ ಜವಾಬ್ದಾರಿ ಹೊತ್ತ ರಾಜೇಶ್ವರಿ ಇಬ್ಬರು ಸಹೋದರಿ ಹಾಗೂ ಇಬ್ಬರು ಸಹೋದರರನ್ನು ಓದಿಸುತ್ತಿದ್ದಾರೆ. ಅಕ್ಕನಂತೆ ತಂಗಿ ರಾಮೇಶ್ವರಿ ಕೂಡ ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಅವರ ಅಕ್ಕ ಭುವನೇಶ್ವರಿ ಹಾಕಿ ಆಟಗಾರ್ತಿ ಆಗಿದ್ದರೂ, ವಿವಾಹದ ನಂತರ ಕ್ರೀಡೆ ತ್ಯಜಿಸಿದ್ದಾರೆ. ಸಹೋದರರಾದ ಕಾಶಿನಾಥ್ ಗಾಯಕ್ವಾಡ್ ರಾಷ್ಟ್ರಮಟ್ಟದ ತಬಲಪಟು ಹಾಗೂ ಇನ್ನೊಬ್ಬ ವಿಶ್ವನಾಥ ಗಾಯಕ್ವಾಡ್ ಬ್ಯಾಡ್ಮಿಂಟನ್​ನಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಕ್ರೀಡೆಯ ಮೇಲೆ ಅಪಾರ ಪ್ರೀತಿ ಇರುವ, ಕ್ರಿಕೆಟ್ ಆಡಲು ಮಗಳನ್ನು ಪ್ರೋತ್ಸಾಹಿಸುವ ತಂದೆ ವಿಜಯಪುರದ ರಾಜೇಶ್ವರಿ ಗಾಯಕ್ವಾಡ್ ಅವರಿಗೆ ಇರುವುದು ಹೆಮ್ಮೆ. ಇದಕ್ಕಾಗಿ ಆಕೆ ಅದೃಷ್ಟವಂತೆ. == ಕ್ರಿಕೆಟ್​ಗೆ ಪದಾರ್ಪಣೆ == 2015ರ ಜೂನ್ 28ರಂದು ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಏಕದಿನ ಅಂತರಾಷ್ಟ್ರೀಯ ಪಂದ್ಯಾವಳಿ ಮೂಲಕ ಭಾರತ ತಂಡದಲ್ಲಿ ನೆಲೆಯೂರಿರುವ ರಾಜೇಶ್ವರಿ, ಎಡಗೈ ಸ್ಪಿನ್ ಬೌಲಿಂಗ್ ಮೂಲಕ ಎದುರಾಳಿಗಳನ್ನು ಉರುಳಿಸುವ ತಂತ್ರಗಾರಿಕೆಯನ್ನು ಹೊಂದಿದ್ದಾರೆ. 2007ರಲ್ಲಿ ರಣಜಿಗೆ ಆಯ್ಕೆಯಾಗಿ, ನಂತರ 19 ವರ್ಷದೊಳಗಿನ ಮಹಿಳಾ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2009ರಲ್ಲಿ ಅಂತರಾಜ್ಯ ಟಿ-20 ಚಾಂಪಿಯನ್​ಶಿಪ್​ನಲ್ಲಿ , 2014ರ ಜನವರಿ 7ರಿಂದ ರಾಂಚಿಯಲ್ಲಿ ನಡೆದ ಚಾಲೆಂಜರ್ ಟ್ರೋಫಿಯಲ್ಲಿ ಭಾರತ ಪರ (ಬ್ಲೂ ಟೀಂ)ನಲ್ಲಿ ಆಟವಾಡಿದ್ದಾರೆ. ನಂತರ ಅಧಿಕೃತವಾಗಿ 2015ರಲ್ಲಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿದ್ದು, ಏಕದಿನ, ಚಾಂಪಿಯನ್​ಶಿಪ್, 2016ರಲ್ಲಿ ಮಹಿಳಾ ಟಿ-20 ಪಂದ್ಯಗಳಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಏಕದಿನ ಪಂದ್ಯದಲ್ಲಿ 53 ವಿಕೆಟ್ ಪಡೆದಿದ್ದು, ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್ ಪಡೆದು 15 ರನ್ ನೀಡುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ. == ಆರಂಭಿಕ ಜೀವನ ಮತ್ತು ಹಿನ್ನೆಲೆ == ಕ್ರಿಕೆಟ್ ಅವರ ಮೊದಲ ಆಯ್ಕೆಯಾಗಿರಲಿಲ್ಲ. ಕ್ರಿಕೆಟ್ಗೆ ಮೊದಲು ಯಶಸ್ವಿ ಜಾವೆಲಿನ್ ಮತ್ತು ಡಿಸ್ಕಸ್ ಎಸೆತಗಾರ ಮತ್ತು ಕಿರಿಯ ವಾಲಿಬಾಲ್ ತಂಡದ ಜಿಲ್ಲೆಯ ಸದಸ್ಯರಾಗಿದ್ದರು. ರಾಜೇಶ್ವರಿ ತನ್ನ ವೃತ್ತಿಜೀವನವನ್ನು 2007 ರಲ್ಲಿ ವಿಜಯಪುರ ಮಹಿಳಾ ಕ್ರಿಕೆಟ್ ಕ್ಲಬ್ನಲ್ಲಿ ಪ್ರಾರಂಭಿಸಿದರು.ತಮ್ಮ 28 ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 7. 3 ಓವರ್ಗಳಿಂದ 5/15 ಅವರ ಅಂಕಿಅಂಶಗಳು ಅವರ ವೃತ್ತಿಜೀವನದಲ್ಲಿ ಇದುವರೆಗೂ ಉತ್ತಮವಾಗಿವೆ. ರಾಜೇಶ್ವರಿ ಗಾಯಕ್ವಾಡ್ ಅವರು 2014ರ ಜನವರಿಯಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯವಾಡುವ ಮೂಲಕ ಕ್ರಿಕೆಟ್ ಬದುಕಿಗೆ ಪಾದಾರ್ಪಣೆ ಮಾಡಿದರು. 29 ಏಕದಿನ ಪಂದ್ಯಗಳನ್ನು ಆಡಿರುವ ರಾಜೇಶ್ವರಿ ಅವರು 53 ವಿಕೆಟ್ ಗಳನ್ನು ಪಡೆದಿದ್ದಾರೆ. ಜನೆವರಿ 2014 ರಲ್ಲಿ ಶ್ರೀಲಂಕಾ ವಿರುದ್ಧದ ಟಿ-ಟ್ವೆಂಟಿ ಸರಣಿಯಲ್ಲಿ ಮೊದಲ ಬಾರಿಗೆ ಭಾರತದ ಪರವಾಗಿ ಆಡುವ ಅವಕಾಶ ಪಡೆದರು. ಅದೇ ತಿಂಗಳು ಅಂತರಾಷ್ಟ್ರೀಯ ಏಕದಿನಕ್ಕೂ ಪಾದಾರ್ಪಣೆ ಮಾಡಿದರು. ಆದರೆ ಈ ಸಂಭ್ರಮ ಹೆಚ್ಚು ದಿನ ಉಳಿಯದೆ ಆಘಾತವೊಂದು ಎದುರಾಯಿತು. ಚಿನ್ನಸ್ವಾಮಿ ಸ್ಟೇಡಿಯಮ್ ನಲ್ಲಿ ಪಂದ್ಯವನ್ನು ವೀಕ್ಷಿಸುವಾಗಲೇ, ತಂದೆ ಹೃದಯಾಘಾತದಿಂದ ಮೃತಪಟ್ಟರು. ಅಂದಿನಿಂದ ಮನೆಯ ಸಂಪೂರ್ಣ ಜವಾಬ್ದಾರಿ ರಾಜೇಶ್ವರಿಯವರ ಹೆಗಲೇರಿತು. ಇಂತಹ ಕಷ್ಟದ ಸಂದರ್ಭದಲ್ಲಿ ಕನಸುಗಳಿಗೆ ಗುಡ್ ಬೈ ಹೇಳಿಬಿಡುವವರೇ ಹೆಚ್ಚು ಜನ.. ಆದರೆ ತಂದೆಯ ಅಗಲುವಿಕೆಯಿಂದ ಉಂಟಾದ ಮಾನಸಿಕ ಆಘಾತ, ಆರ್ಥಿಕ ಸಂಕಷ್ಟದ ನಡುವೆಯೂ ರಾಜೇಶ್ವರಿ ತಮ್ಮ ಕ್ರಿಕೆಟ್ ಕನಸನ್ನು ಕಮರಿ ಹೋಗಲು ಬಿಡಲಿಲ್ಲ. ಉತ್ತಮ ಪ್ರದರ್ಶನ ತೋರಿ ತಂಡದಲ್ಲಿ ನೆಲೆಯೂರಿದ ರಾಜೇಶ್ವರಿ ವಿಶ್ವಕಪ್ ತಂಡಕ್ಕೂ ಆಯ್ಕೆಯಾದರು. ವಿಶ್ವಕಪ್ ನ ಮೊದಲ 6 ಪಂದ್ಯಗಳಲ್ಲಿ ತಂಡದಲ್ಲಿ ಸ್ಥಾನ ಸಿಗಲಿಲ್ಲವಾದರೂ, ನ್ಯೂಜಿಲೆಂಡ್ ಎದರು ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. == ತರಬೇತಿ == ಶಿವಾನಂದ್ ಗಾಯಕ್ವಾಡ್ , ಸ್ವತಃ ವೃತ್ತಿಪರ ಕ್ರಿಕೆಟ್ ಆಡಲು ಬಯಸಿದ್ದರೂ, ಸೂಕ್ತ ಅವಕಾಶಗಳು ಸಿಗದೆ ಮುಂದುವರೆಸಲು ಸಾಧ್ಯವಾಗಲಿಲ್ಲ. 2007 ರಲ್ಲಿ ವಿಜಯಪುರದಲ್ಲಿ ಮಹಿಳಾ ಕ್ರಿಕೆಟ್ ಅಕಾಡೆಮಿ ಶುರುವಾದಾಗ ಮಗಳು ರಾಜೇಶ್ವರಿಗೆ ಅಲ್ಲಿ ತರಬೇತಿ ಪಡೆಯಲು ಕಳುಹಿಸಿದರು. ಕನಸುಗಳನ್ನು ಬೆನ್ನತ್ತಿದಾಗ ಧೈರ್ಯ ತುಂಬುವವರಿಗಿಂತ, ಅವಿಶ್ವಾಸ ತೋರಿಸುವವರೇ ಹೆಚ್ಚು. ‘ ಕ್ರಿಕೆಟ್ ಕೇವಲ ಪುರುಷರ ಆಟ, ಮಹಿಳಾ ಕ್ರಿಕೆಟ್ ಅನ್ನು ಯಾರು ನೋಡುತ್ತಾರೆ..? ಸುಮ್ಮನೆ ಭವಿಷ್ಯ ಹಾಳು ಮಾಡಿಕೊಳ್ಳಬೇಡ ‘ ಎಂಬಂತಹ ಎದೆಗುಂದಿಸುವ ಮಾತುಗಳು ಕೇಳಿ ಬರುವುದೇ ಹೆಚ್ಚು. ಆದರೆ ಮಗಳ ಪ್ರತಿಭೆಯ ಅರಿವಿದ್ದ ತಂದೆ, ಸಾಧಿಸುವ ಛಲ ಮೂಡಿಸಿ, ಪ್ರೋತ್ಸಾಹಿಸಿದರು. ಜಾವೆಲಿನ್ ಥ್ರೋ, ಡಿಸ್ಕಸ್ ಥ್ರೋ, ವಾಲಿಬಾಲ್ ಕೂಡ ಚೆನ್ನಾಗಿ ಆಡುತ್ತಿದ್ದ ರಾಜೇಶ್ವರಿ, ತಂದೆಯ ಸಲಹೆಯ ಮೇರೆಗೆ ಕ್ರಿಕೆಟ್ ಕಡೆಗೆ ಸಂಪೂರ್ಣ ಗಮನ ಹರಿಸಿದರು. ಮಹಿಳಾ ಕ್ರಿಕೆಟ್ ಅಕಾಡೆಮಿಯನ್ನು ಸೇರಿಕೊಂಡ ರಾಜೇಶ್ವರಿ ಅಲ್ಲಿ ಅಶೋಕ್ ಜಾಧವ್, ಬಸವರಾಜ್ ಇಜೇರಿ, ಸಲೀಂ, ದಿಲೀಪ್ ಕಲಾಲ್, ಎ ಜಿ ಪಟೇಲ್ ಮುಂತಾದವರಲ್ಲಿ ತರಬೇತಿ ಪಡೆದರು. ಪಿಯು ಶಿಕ್ಷಣ ಮುಗಿಸಿ ಬೆಂಗಳೂರಿಗೆ ತೆರಳಿದ ಇವರು ಡಿಗ್ರಿ ಓದುತ್ತಲೇ, ಕ್ರಿಕೆಟ್ ಅಭ್ಯಾಸವನ್ನೂ ಮುಂದುವರೆಸಿದರು. ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಕೂಡ ಎಲ್ಲ ರೀತಿಯ ಬೆಂಬಲ, ಸೌಲಭ್ಯಗಳನ್ನು ಒದಗಿಸಿತು. == ತಂದೆಯ ನಿಧನ == 2014ರ ಮೇ 24ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಪಂದ್ಯ ವೀಕ್ಷಣೆಗೆ ತಂದೆ ಶಿವಾನಂದ ಆಗಮಿಸಿದ್ದರು. ಅವರೊಂದಿಗೆ ರಾಮೇಶ್ವರಿ ಕೂಡ ತೆರಳಿದ್ದರು. ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ವೇಳೆ ತಂದೆಗೆ ಹೃದಯಾಘಾತವಾಗಿ ಅಸುನೀಗಿದ್ದರು. == ಉಲ್ಲೇಖಗಳು ==